ಬಹಳಷ್ಟು ಜನರಿಗೆ ಕಾದಂಬರಿಗೆ ತೀರಾ ಸಾಮಾನ್ಯವಾದ ‘ಗರಿಕೆ’ ಹುಲ್ಲಿನ ಹೆಸರೇಕೆ ಎಂಬ ಪ್ರಶ್ನೆ ಇರಬಹುದು? ಗುಲಾಬಿಯ ಬಣ್ಣವಾಗಲೀ, ಮಲ್ಲಿಗೆಯ ಕಂಪಾಗಲೀ, ಆಲದ ಮರದ ಗಾಂಭೀರ್ಯವಾಗಲೀ ಇಲ್ಲದ, ಕಾಲಡಿಯಲ್ಲಿ ಸಿಕ್ಕು ಒದ್ದಾಡುವ ಈ ಪುಟ್ಟ ಹುಲ್ಲಿನಲ್ಲಿ ಅಂಥದ್ದೇನಿದೆ?
ನಿಜ. ಗರಿಕೆಗೆ ಯಾವ ಅಹಂಕಾರವೂ ಇಲ್ಲ. ಆದರೆ ಅದಕ್ಕೊಂದು ಮೊಂಡುತನವಿದೆ; ನಾನು ಬದುಕಲೇಬೇಕು ಎನ್ನುವ ಮೊಂಡುತನ.
ಬೇಸಿಗೆಯ ಬಿರುಬಿಸಿಲಿಗೆ ಅದು ಒಣಗಿ ಕಂದು ಬಣ್ಣಕ್ಕೆ ತಿರುಗಿ, ನೆಲದ ಮಣ್ಣಿನೊಂದಿಗೆ ಮಣ್ಣಾಗಿ, ಜೀವವೇ ಇಲ್ಲವೇನೋ ಎಂಬಂತೆ ಮರೆಯಾಗುತ್ತದೆ. ದಾರಿಯಲ್ಲಿ ಹೋಗುವವರು, ಬರುವವರೆಲ್ಲ ಅದರ ಮೇಲೆಯೇ ಕಾಲಿಟ್ಟು ನಡೆಯುತ್ತಾರೆ. ಯಾರ ಗಮನವೂ ಅದರ ಮೇಲಿರುವುದಿಲ್ಲ. ಆದರೆ ಮುಂಗಾರಿನ ಮಳೆಯ ಒಂದೇ ಒಂದು ಹನಿ ಬಿದ್ದರೆ ಸಾಕು, ಎಲ್ಲಿ ಅಡಗಿತ್ತೋ ಅದರ ಜೀವ ಮತ್ತೆ ಹಚ್ಚಹಸಿರಾಗಿ ತಲೆಯೆತ್ತುತ್ತದೆ. ಅದನ್ನು ಎಷ್ಟೇ ತುಳಿಯಿರಿ, ಕತ್ತರಿಸಿ ಬಿಸಾಡಿ, ಅದರ ಚಿಗುರುವ ಕನಸನ್ನ ನಾಶ ಮಾಡುವುದು ಅಸಾಧ್ಯ.
ನಾನು ಈ ಕಥೆಯನ್ನು ಬರೆಯುವಾಗ ನನ್ನ ಕಾಡುತ್ತಿದ್ದದ್ದು ಇದೇ ಬರಿ ಗರಿಕೆ ಅಷ್ಟೇ ಅಲ್ಲ ಮನುಷ್ಯರಲ್ಲೂ ಕೆಲವರು ಹಾಗಿರುತ್ತಾರೆ. ಬದುಕು ಅವರನ್ನು ನಿರ್ದಾಕ್ಷಿಣ್ಯವಾಗಿ ನಡೆಸಿಕೊಂಡರೂ, ಪರಿಸ್ಥಿತಿಗಳು ಉಸಿರುಗಟ್ಟಿಸಿದಾಗಲೂ, ಇನ್ನು ಇವರು ಮುಗಿದೇ ಹೋದರು ಎಂದು ಜಗತ್ತು ತೀರ್ಮಾನಿಸಿದಾಗಲೂ ಅವರು ಒಳಗೆಲ್ಲೋ ಜೀವ ಹಿಡಿದಿಟ್ಟುಕೊಂಡಿರುತ್ತಾರೆ.
ಅವರಲ್ಲಿ ಸೇಡಿನ ಆರ್ಭಟವಿರುವುದಿಲ್ಲ. ಕೂಗಿ ಹೇಳುವ ಆಕ್ರೋಶವಿರುವುದಿಲ್ಲ. ಇರುವುದು ಕೇವಲ ಒಂದು ಮೌನವಾದ, ಮುರಿಯಲಾಗದ ಘನತೆ.
‘ತುಳಿದಷ್ಟು ಚಿಗುರುವಾಕೆ’ ಎಂಬ ಅಡಿಬರಹ ಹೊಳೆದದ್ದು ಆ ಹೊತ್ತಿನಲ್ಲೇ. ಬದುಕಿನ ಬಿರುಗಾಳಿಗಳ ನಡುವೆ, ದೈನಂದಿನ ಸಂಬಂಧಗಳ ತಲ್ಲಣಗಳ ಮಧ್ಯೆ ತನ್ನ ಪಾಡಿಗೆ ತಾನು ಮೌನವಾಗಿ ಸಹಿಸುತ್ತಾ, ಸ್ವಲ್ಪ ಪ್ರೀತಿಯ, ವಿಶ್ವಾಸದ ಹನಿ ಬಿದ್ದರೆ ಸಾಕು ಮತ್ತೆ ಜೀವಂತವಾಗುವ ಒಂದು ಹೆಣ್ಣಿನ ಪಯಣವನ್ನು ಹೇಳಲು ನನಗೆ ಗರಿಕೆಗಿಂತ ಸೂಕ್ತವಾದ ಹೆಸರು ಬೇರೊಂದು ಸಿಗಲಿಲ್ಲ.
ಇಲ್ಲಿ ಬೊಬ್ಬೆ ಹೊಡೆಯುವ ದೊಡ್ಡ ಯುದ್ಧಗಳಿಲ್ಲ. ಇರುವುದು ಕೇವಲ ಬದುಕುವ, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಮೌನ ಹೋರಾಟ. ಆ ಹೋರಾಟದ ಕಥೆಯೇ ‘ಗರಿಕೆ’.